ನನ್ನೂರು ಮಲೆನಾಡು
ಮೋಡ ಮುಸುಕಿರಲು ಬಾನಿಗೆ…
ಶುರು ಮಳೆ ಹನಿಯ ದಿಬ್ಬಣ ಭೂಮಿಗೆ,
ಜೀರುಂಡೆಗಳ ಸದ್ದಿನ ನಡುವಲ್ಲಿ…
ನಾಚುತ್ತಿದೆ ಕಾನನ ತಂಗಾಳಿಯಲ್ಲಿ,
ಸಿಡಿಲು ಮಿಂಚುಗಳ ರೌದ್ರ ನರ್ತನ…
ಮಲೆನಾಡಿಗೆ ಮಳೆಯ ಸಿಂಚನ..!
– ಸುಧನ್ವ ಗಡಿಕಲ್
ಮಲ್ನಾಡ್ ಜೀವ್ನ
ಮಂಡೆಗ್ ಹಾಕಿರೋ ಮಂಡಾಳೆ ಜಾರಲ್ಲ…
ಮಲೆನಾಡಿಗರಿಗೆ ಮಳೆಗಾಲವೆಂದರೆ ಬೇಜಾರಾಗಲ್ಲ,
ಮಳೆಗಾಲದ ನಡುವೆ ಬರುತ್ತೆ ಕಪ್ಪೆ ಹುಳ ಸತ್ತ ದುರ್ಗಂಧ…
ಆದರೂ ನಂಗ್ ನನ್ನ ಮಲ್ನಾಡೆ ಚಂದ..
ಮಲೆನಾಡಿನ ಆಚರಣೆಗಳು ಹೋಗುತ್ತಿದವೇ ಮರೆತು…
ಮರ ಗಿಡನೆಲ್ಲ ಕಡೆದು ಪ್ರಾಣಿ ಪಕ್ಷಿನೆಲ್ಲ ಕೊಂದು ನಾವಾಗಿ ನಾವೇ ತಯಾರು ಮಾಡ್ತಿದ್ದೀವಾ ಮಲೆನಾಡಿಗೆ ಚಿತೆ..!
– ಸುಧನ್ವ ಗಡಿಕಲ್
ಮಧ್ಯಾಹ್ನದ ಮಳೆ..!
ಹೊತ್ತೇರಿದ ಮಧ್ಯಾಹ್ನಕೆ ಮಂಕು ಕವಿದಂತೆ,
ಸುಯ್ಗುಟ್ಟುವ ಗಾಳಿಯಲಿ ಕಂಪನವ ತಂದಂತೆ..
ಬಾನಂಗಳದಲಿ ನೂರು ನಗಾರಿಗಳ ಗರ್ಜನೆ,
ಧರೆಗಿಳಿಯಿತು ತಂಪಿನ ಮಳೆಯ ನರ್ತನ..!
– ಸುಧನ್ವ ಗಡಿಕಲ್

ದಾರಿ ಚಿಕ್ಕದಾದರೂ,
ಗುರಿ ಪ್ರಕೃತಿಯಷ್ಟೇ ವಿಶಾಲವಾಗಿರಲಿ..!
– ಸುಧನ್ವ ಗಡಿಕಲ್
ಪ್ರತೀ ಕತ್ತಲ ರಾತ್ರಿಯ ನಂತರ ಬೆಳಕು ಬಂದೇ ಬರುತ್ತದೆ,
ಕಷ್ಟಗಳ ನಂತರ ಸುಖದ ಕಾಲ ಇದ್ದೇ ಇರುತ್ತದೆ..
– ಸುಧನ್ವ ಗಡಿಕಲ್
ಪ್ರಕೃತಿ ಎಂದಿಗೂ ಆತುರ ಪಟ್ಟಿಲ್ಲ..
ಆದರೆ ಅದು ಎಂದೆಂದಿಗೂ ತನ್ನ ಕೆಲಸವ ನಿಲ್ಲಿಸಿಲ್ಲ..
– ಸುಧನ್ವ ಗಡಿಕಲ್
ದಾರಿಗಳು ಮುಗಿದರೂ ಗುರಿಯ ಹಸಿವು ಇಂಗದು, ಈ ಪಯಣದ ಅಮಲು ತಗ್ಗದು..
ತಲುಪುವ ಆತುರವಿಲ್ಲದ ದೂರ, ಪ್ರಕೃತಿಯ ಮಡಿಲೇ ಆಗಿದೆ ಸಾರ..
ಹಸಿರ ನಡುವೆ ಕನಸಿನ ಸಂಚಾರ, ಇದೇ ನನ್ನ ಮನದ ಶಾಂತಿಯ ದ್ವಾರ..!
– ಸುಧನ್ವ ಗಡಿಕಲ್
