Categories
Author Kannada Poem Rain

ದಣಿದ ಧರೆಗೆ ವರುಣರಾಯನ ವರ..!

– ಸುಧನ್ವ ಗಡಿಕಲ್

ಬೇಸಿಗೆ ಬಿಸಿಯಲಿ ಬೆಂದ ಇಳೆಯನ್ನು ತಂಪೆರೆವ ಸಮಯ,
ಬಿಸಿಲ ಕಾವಿಗೆ ತಾಕಿತ್ತು ಪ್ರಕೃತಿಯ ವಿನಯ..
ಗಾಳಿಯ ಚಾಮರವು ಒಂದೆಡೆ ಬೀಸಲು,
ಗುಡುಗು ಸಿಡಿಲ ನಾದವು ಮುಗಿಲಲ್ಲಿ ಮೊಳಗಲು…

ಆಕಾಶದ ಅಂಗಳದಿ ಪನ್ನೀರಿನ ಮಾಲೆ,
ಧರೆಗೆ ಇಳಿದಂತೆ ಆನಂದದ ಲೀಲೆ…
ಪ್ರತಿ ಹನಿಯ ಸ್ಪರ್ಶಕೆ ಮಣ್ಣಿನ ಘಮಲು,
ಹಸಿರ ಕಾಂತಿ ಹಬ್ಬಿತ್ತು ವನದೊಳು ಪಸರಿಸಲು…

ಬಣಗುಟ್ಟಿದ ಮರಗಿಡಗಳು ಇಂದು ನಲಿದಿವೆ,
ಮಳೆಯ ಮುತ್ತಿಗೆ ಮೈಮರೆತು ಓಲಾಡಿವೆ…
ತಣಿದ ಭೂಮಿ ಮೆಲ್ಲಗೆ ಕಣ್ಣು ತೆರೆದಿದೆ,
ಒಣಗಿದ ಕನಸಲಿ ಹಸಿರ ಚಿಗುರು ಮೂಡಿದೆ..!

Advertisement
Advertisement Advertisement