– ಅಭಿ ತೀರ್ಥಹಳ್ಳಿ Abbi Thirthahalli
ರಕ್ಷಿತ್ ತೀರ್ಥಹಳ್ಳಿಯವರ “ಆರು ಎಸೆತಗಳು” ಕೇವಲ ಕಥೆಗಳ ಗುಚ್ಛವಲ್ಲ, ಅದು ಮನುಷ್ಯನ ಮನಸ್ಸಿನ ಆಳದ ಭಾವನೆಗಳನ್ನು ಶೋಧಿಸುವ ಒಂದು ಅಪರೂಪದ ಕಥಾಸಂಕಲನ. ಮನುಷ್ಯನು ತನ್ನ ಹೆಚ್ಚಿನ ಸಮಯವನ್ನು ಭಾವನೆಗಳ ಜೊತೆ ಕಳೆಯುತ್ತಾನೆ. ಆ ಸಾಂಗತ್ಯವೇ ಅವನ ಬದುಕಿನ ಉನ್ನತಿ ಅಥವಾ ಅವನತಿಗೆ ಕಾರಣವಾಗುತ್ತದೆ. ಈ ಆಳವಾದ ಮಾನವೀಯ ತತ್ವವನ್ನು ಹೊತ್ತ ಈ ಆರು ಕತೆಗಳ ಭಾವಲೋಕದಲ್ಲಿ ನಾನೇ ಖುದ್ದಾಗಿ ನಡೆದು ಬಂದ ಅನುಭವವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಮೊದಲಿಗೆ ತುಂಗೇಬೈಲಿನ ಮಂಜಪ್ಪನ “ಗೋಪಾಲ ಫಾರ್ಮ್” ಕಡೆಗೆ ಹೆಜ್ಜೆ ಹಾಕಿದಾಗ, ಅಲ್ಲಿನ ವೆನಿಲ್ಲಾ ಘಮಲಿನಲ್ಲಿ ಒಂದು ಅಮಾನವೀಯ ದುರಂತದ ವಾಸನೆ ಬಡಿಯಿತು. ಪ್ರಾಮಾಣಿಕ ಕೆಲಸಗಾರ ಗೋಪಾಲನ ಮೇಲೆ ವೆನಿಲ್ಲಾ ಕದ್ದನೆಂಬ ಸುಳ್ಳು ಗುಮಾನಿ ಮೂಡಿದಾಗ, ಕೇವಲ ಮರ್ಯಾದೆಗೆ ಅಂಜಿ ಆ ಬಡಪಾಯಿ ತನ್ನ ಇಡೀ ಕುಟುಂಬದೊಂದಿಗೆ ವಿಷ ಕುಡಿದು ಪ್ರಾಣ ಬಿಟ್ಟ ದೃಶ್ಯ ಕಣ್ಣಿಗೆ ಕಟ್ಟುತ್ತದೆ. ತದನಂತರ ಮಂಜಪ್ಪ ಪಡುವ ಪಶ್ಚಾತ್ತಾಪ ಕೇವಲ ವ್ಯರ್ಥ ರೋದನವಾಗಿ ಉಳಿಯುವುದು ಮನುಷ್ಯನ ಸಂದೇಹದ ದುಷ್ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ. ಆ ಭಾರವಾದ ಹೆಜ್ಜೆಗಳೊಂದಿಗೆ ಬೈಲುಮನೆಯ ಕತ್ತಲ ದಾರಿಯಲ್ಲಿ ಸಾಗಿದಾಗ ಎಲ್ಲೋ ದೂರದಲ್ಲಿ ಗುಂಡಿನ ಸದ್ದು ಕೇಳಿಸಿತು. ಮುದುಕ ಜಗ್ಗಯ್ಯ ತನ್ನ ಒಂಟಿತನಕ್ಕೆ ಆಸರೆಯಾಗಿದ್ದ ಪ್ರೀತಿಯ ನಾಯಿ “ಕರಿಯ”ನನ್ನು ತಿಂದ ಚಿಟ್ಟೆಹುಲಿಯನ್ನು ಸಾಯಿಸಲೇಬೇಕು ಎಂದು ಹಠ ತೊಟ್ಟಿದ್ದ. ಆದರೆ ಶಿಕಾರಿ ಕಿಟ್ಟನೊಡನೆ ನಡೆದ ಆ ಕರಾಳ ಕಾರ್ಯಾಚರಣೆಯಲ್ಲಿ, ಜಗ್ಗಯ್ಯ ತಾನೇ ಸಾಕಿದ ನಾಯಿಯನ್ನು ಅಪ್ಪಿತಪ್ಪಿ ಹೊಡೆದು ಜೈಲುಪಾಲಾಗುವ ಸನ್ನಿವೇಶ ಮಾನವನ ಸೇಡಿನ ಹುಚ್ಚು ತರುವ ವಿನಾಶವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.

ಮರುದಿನ ಕೇಶವಭಟ್ಟರ ಮನೆಯ ಮೈದಾನದ ಬಳಿ ಬಂದಾಗ, ಕಥಾನಾಯಕ ಕಾರ್ತಿಕ್ ತಾನು ಆರಾಧಿಸುತ್ತಿದ್ದ ಸೌಮ್ಯಶ್ರೀಯ ಪ್ರೇಮಕ್ಕಾಗಿ ಹಾತೊರೆಯುತ್ತಾ ಅಡಿಕೆ ಚಪ್ಪರದತ್ತ ಬಾರಿಸಿದ ಆ ಆರು ಎಸೆತಗಳು ನೆನಪಾದವು. ಆಕೆಯ ಮದುವೆ ಹಾಗೂ ನಂತರದ ವೈಧವ್ಯದ ಕರಾಳತೆ, ಕಾರ್ತಿಕನ ಮೌನ ಪ್ರೇಮವನ್ನು ಒಂದು ಶ್ರೇಷ್ಠ ದುರಂತ ಕಾವ್ಯವನ್ನಾಗಿಸಿದೆ. ಈ ಮೌನದ ನಡುವೆ ಹಸ್ರಾಣಿ ಬೆಟ್ಟದ ತುದಿಯಲ್ಲಿ ಮಧು ಮತ್ತು ವಿನೋದನ ಸಂಭಾಷಣೆ ಕಿವಿಗೆ ಬಿತ್ತು. ಗಂಡಸರಿಂದ ಸತತವಾಗಿ ಮೋಸ ಹೋಗಿದ್ದ ಮಧುವಿನ ಮಾನಸಿಕ ತುಮುಲ ಎಂತಹವರನ್ನೂ ಚಿಂತೆಗೀಡುಮಾಡುತ್ತದೆ. ಕೊನೆಗೆ ವಿನೋದನಿಗೆ ತಾನು ಹೊರೆಯಾಗದಿರಲು ತನ್ನ ಗರ್ಭಕೋಶದ ಸಮಸ್ಯೆಯನ್ನು ಮುಚ್ಚಿಟ್ಟು ಆಕೆ ದೂರ ಸರಿಯುವ ನಿರ್ಧಾರ ಪ್ರೀತಿಯ ತ್ಯಾಗ ಮತ್ತು ವಾಸ್ತವದ ಸಂಘರ್ಷವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತದೆ. ಅಲ್ಲಿಂದ ಆಲೆಮನೆಯತ್ತ ಮುಖ ಮಾಡಿದಾಗ, ಒಂಟಿ ಜೀವ ಅಪ್ಪಣ್ಣನ ಆಸ್ತಿಗಾಗಿ ಹಪಾಹಪಿಸುತ್ತಿದ್ದ ಪೇಟೆಯ ಸಂಬಂಧಿಕರ ದರ್ಪವನ್ನು ಸೂರಜ್ ಎಂಬ ಯುವಕ ಮುರಿದದ್ದು ಸಮಾಧಾನ ತಂದಿತು. ಕೊನೆಗೆ ಆನಂದನು ತನ್ನ ತಾಯಿಯ ಅಸ್ಥಿಯನ್ನು ಮನೆಯ ಮುಂದಿನ ಹೂವಿನ ಗಿಡಕ್ಕೆ ಹಾಕಿ ತಂದೆಯೊಡನೆ ಕಣ್ಣೀರು ಹಾಕಿದ ದೃಶ್ಯ ಕಳೆದುಹೋಗುತ್ತಿದ್ದ ಕೌಟುಂಬಿಕ ಮೌಲ್ಯಗಳ ಪುನರುತ್ಥಾನದಂತೆ ಭಾಸವಾಯಿತು.

ಕೊನೆಗೆ ಊರಿಗೆ ಮರಳಲು ಗಜಾನನ ಬಸ್ಸು ಹತ್ತಿದಾಗ, “ಆಆಆ.. ದೂರ..” ಎನ್ನುವ ಕಂಡಕ್ಟರ್ ಸುಧಾಕರ ಎದುರಾದ. ಅವನನ್ನು ಹುಚ್ಚನಂತೆ ಅನುಕರಿಸಲು ಹೋಗಿ ಅಪಹಾಸ್ಯಕ್ಕೀಡಾದ ಯುವಕ ಮನೋಜ ದ್ವೇಷದಿಂದ ಸುಧಾಕರನ ಮನೆಗೆ ಬಾಟಲಿ ಹೊಡೆದು ತೊಂದರೆ ಕೊಟ್ಟಿದ್ದ. ಆದರೂ ಪೊಲೀಸ್ ಠಾಣೆಯಲ್ಲಿ ಸುಧಾಕರ ಮನೋಜನ ಭವಿಷ್ಯವನ್ನು ಕಾಪಾಡಿ ಕ್ಷಮಿಸಿದ ಪರಿ, ತಪ್ಪು ಮಾಡುವುದು ಸಹಜ ಆದರೆ ಕ್ಷಮಿಸಿ ತಿದ್ದಿಕೊಳ್ಳುವುದು ಮುಖ್ಯ ಎಂಬ ಉದಾತ್ತ ಸಂದೇಶ ನೀಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಭಾಷೆ, ನಿರೂಪಣೆ ಮತ್ತು ಮಾನಸಿಕ ವಿಶ್ಲೇಷಣೆಯಲ್ಲಿ ಈ ಕೃತಿ ಅತ್ಯಂತ ಶ್ರೀಮಂತವಾಗಿದೆ. ಸಾಹಿತ್ಯ ಮತ್ತು ಬದುಕಿನ ಸೂಕ್ಷ್ಮತೆಗಳನ್ನು ಅರಿಯುವವರು ಹಾಗೂ ಪ್ರಕೃತಿಯ ಒಡನಾಟವನ್ನು ಇಷ್ಟಪಡುವವರು ಖಂಡಿತ ಓದಲೇಬೇಕಾದ ಕೃತಿ ಇದು.

